....ಇರ್ಶಾದ್ ಮೂಡಬಿದ್ರಿ
ಅದು ಬೆತ್ತಲೆ ಮಲಗಿದ ಮರುಭೂಮಿ. ನಮ್ಮ ಸೂರ್ಯನಿಗೆ ಅದೇನೋ ರಸಿಕತನ. ಚುಂಬಿಸಲು ಸದಾ ಓಡಿ ಬರುತ್ತಿರುತ್ತಾನೆ. ಈ ಚಕ್ಕಂದ ನೋಡುತ್ತಾ ನಾನು ಬಸ್ಸಿಗೆ ಕಾಯುತ್ತಾ ನಿಂತಿರುವೆನು.
ಮೊನ್ನೆ ಹೀಗೆಯೇ ಆಯಿತು. ಬಸ್ಸಿಗಾಗಿ ಕಾದಿದ್ದೆ. ಎದುರುಗಡೆಯ ಜಿನಸಿ ಅಂಗಡಿಯ 'ಡೆಲಿವರಿ ಬಾಯ್' ಸೈಕಲ್ ಏರಿ ನಿಂತಿದ್ದ. ಆತನಿಗೆ ರಸ್ತೆ ದಾಟಬೇಕಿತ್ತು. ಆತನ ಹಣೆಯಲ್ಲಿ ಸೆಖೆಯ ಬೇಗೆಗೆ ಬೆವರು ಇಳಿಯುತ್ತಿತ್ತು. ಅಷ್ಟರಲ್ಲಿ ಮೊಬೈಲ್ ರಿಂಗ್ಗುಟ್ಟಿತು.
"ಈಗಲೇ ತಲುಪುವೆ, ಕೇವಲ ಐದು ನಿಮಿಷ" ಎಂದು ವಿನಂತಿಸಿದ. ರಸ್ತೆಗೆ ಇಳಿದೇ ಬಿಟ್ಟ. ಎಲ್ಲಿಂದ ಬಂತೋ ಶರವೇಗದ ಕಾರು, ಅಪ್ಪಳಿಸಿಯೇ ಬಿಟ್ಟಿತು. ಎದುರಿನ ಗೋಡೆಗೆ ಬಡಿದ ದೇಹ ಮತ್ತೆ ಚಲಿಸಲಿಲ್ಲ. ಅಲ್ಲಿಗೇ ನಿಂತು ಹೋಯಿತು. ನೋಡುತ್ತಿದ್ದ ನಾನೂ ಮರಗಟ್ಟಿ ಹೋದೆ.
ಹೌದು, ಅದ ಐದೇ ನಿಮಿಷದಲ್ಲಿ ಬರುವೆನೆಂದು ಮಾತು ಕೊಟ್ಟಿದ್ದ!
ಆತನಿಗೆ ಬಂದ ಕರೆ ಯಾರದ್ದು???








